ಜೆಡಿಎಸ್ ಕಾರ್ಯಕರ್ತರು ನಾಲೆ ಮುಚ್ಚಲು ಮುಂದಾದಾಗ
ಕುಣಿಗಲ್:- ತಾಲೂಕಿಗೆ ನ್ಯಾಯಯುತವಾಗಿ ಬರಬೇಕಾದ ಹೇಮಾವತಿ ನೀರನ್ನು ನಾಲೆ ಒಡೆದು ತುರುವೇಕೆರೆ ತಾಲೂಕಿನ ಕೆರೆಗಳಿಗೆ ರಾಜಕೀಯ ವ್ಯಕ್ತಿಗಳು ನೀರು ತುಂಬಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ ಎನ್ ಜಗದೀಶ್ ಆರೋಪಿಸಿದ್ದಾರೆ.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದಾರು.
ತಾಲೂಕಿಗೆ ಸುಮಾರು ವರ್ಷಗಳಿಂದ ಹೇಮಾವತಿ ನೀರನ್ನು ಸಮರ್ಪಕವಾಗಿ ಹರಿಸುವಲ್ಲಿ ಅಧಿಕಾರಿಗಳು ಹಾಗೂ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳ ಕುಮ್ಮಕ್ಕಿನಿಂದ ತುರುವೇಕೆರೆ ತಾಲೂಕಿನ ನಾರನಹಳ್ಳಿ ಗ್ರಾಮದ ಕೆರೆಯ ಹಿಂಭಾಗದಲ್ಲಿ ಹಾದುಹೋಗಿರುವ ಹೇಮಾವತಿ ನಾಲೆ ಒಡೆದು ನೀರನ್ನು ಕದಿಯುತ್ತಿದ್ದಾರೆ ಎಂದರು.
ಸ್ಥಳೀಯ ರಾಜಕೀಯ ಮುಖಂಡರು ಕುಣಿಗಲ್ ತಾಲೂಕಿಗೆ ನೀರು ಬರದಂತೆ ಮಾಡಿದ್ದಾರೆ, ಕುಣಿಗಲ್ ಜೆಡಿಎಸ್ ಕಾರ್ಯಕರ್ತರು ನಾಲೆ ಮುಚ್ಚಲು ಮುಂದಾದಾಗ ಸ್ಥಳೀಯ ಜೆಸಿಬಿ ವಾಹನ ಚಾಲಕರು ಈ ಕೆಲಸಕ್ಕೆ ಬರಲು ಹೆದರುತ್ತಿದ್ದಾರೆ, ಅಧಿಕಾರಿಗಳು ತುರುವೇಕೆರೆ ತಾಲ್ಲೂಕಿನ ರಾಜಕೀಯ ಮುಖಂಡರಿಗೆ ಹೆದರಿ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲಎಂದು ಆರೋಪಿಸಿದರು.
ಕುಣಿಗಲ್ ಶಾಸಕರು ಈ ವಿಚಾರವಾಗಿ ಜಿಲ್ಲಾಮಟ್ಟದ ಅಧಿಕಾರಿಗಳ ಮಾತನಾಡಿ ಬಗೆಹರಿಸಿಎಂದು ಸಲಹೆ ನೀಡಿದರು, ತಾಲೂಕಿನ ಕೊತ್ತಕೆರೆ ಬೇಗೂರು ಕೆರೆ ಸೇರಿದಂತೆ ಮಂಗಳ ಜಲಾಶಯವನ್ನು ತುಂಬಿಸಲು ಆಗುತ್ತಿಲ್ಲ ಸುತ್ತಮುತ್ತಲಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.
ತಾಲ್ಲೂಕಿಗೆ ಸಮರ್ಪಕವಾದ ಹೇಮಾವತಿ ನೀರನ್ನು ನೀಡಬೇಕು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷರಾದ ಕೆ ಎಲ್ ಹರೀಶ್ ಜೆಡಿಎಸ್ ಮುಖಂಡರಾದ ರಾಮಣ್ಣ, ರಂಗಸ್ವಾಮಿ, ನಾಗರಾಜ್, ಸೇರಿದಂತೆ ಇತರರು ಇದ್ದರು.
